RSS ಪಥಸಂಚಲನ; ಹಿಂದುತ್ವದ ವಿರಾಟ ದರ್ಶನ

ಬಾಗಲಕೋಟೆ: ಕೇಸರಿಕೋಟೆ ಎಂದೇ ಹೆಸರಾಗಿರುವ ಬಾಗಲಕೋಟೆಯಲ್ಲಿ ವಿಜಯ ದಶಮಿ‌ ಅಂಗವಾಗಿ ರಾಷ್ಟ್ರೀಯ ಸ್ವಯಂ‌ ಸೇವಕ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಈ ವೇಳೆ ನಡೆದ ಗಣ ವೇಷಧಾರಿಗಳು ಆಕರ್ಷಕ ಪಥಸಂಚಲನ ನೋಡುಗರ ಮೈನವಿರೇಳಿಸುವಂತಿತ್ತು.

ನಗರದ ಬಿವಿವಿ ಸಂಘದ ಕಾಲೇಜು ಮೈದಾನದಿಂದ ಹೋರಟ ಗಣವೇಷಧಾರಿಗಳ ಎರಡು ಪ್ರತ್ಯೇಕ ತಂಡಗಳು ನಗರದ ಪ್ರಮುಖ‌ ಬೀದಿಗಳ‌ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಹಾಸಂಗಮಗೊಂಡವು. ಅಲ್ಲಿಂದ ಒಟ್ಟಾಗಿ ಸಂಘದ ಮೈದಾನದತ್ತ ತೆರಳಿದವು.

ಆರೆಸ್ಸೆಸ್ ಶತಮಾನೋತ್ಸವ ಆಚರಣೆ ಸಂಭ್ರಮ ಕಾರ್ಯಕರ್ತರ ಸಂಭ್ರಮವನ್ನು ನೂರ್ಮಡಿಗೊಳಿಸಿದ್ದು ಕಂಡು ಬಂದಿತು. ಆರೆಸ್ಸೆಸ್ ಸ್ವಯಂ‌ಸೇವಕರು‌ ಸೇರಿದಂತೆ ಸಹಸ್ರ ಸಂಖ್ಯೆಯಲ್ಲಿ ಗಣವೇಷಧಾರಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.

ನಗರ ಕೇಸರಿಮಯ:

ಆರೆಸ್ಸೆಸ್ ವಾರ್ಷಿಕೋತ್ಸವದ ಅಂಗವಾಗಿ ನಡೆದ ಆಕರ್ಷಕ ಪಥಚಲನಕ್ಕೆ ಅದ್ಧೂರಿ ಸ್ವಾಗತ ನೀಡಲು ನಗರಾದ್ಯಂತ ಕೇಸರಿ‌ ಸ್ವಾಗತ ಕಮಾನುಗಳು, ಭಾರತ‌ಮಾತೆ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳುಳ್ಳ ಬ್ಯಾನರ್ ಪ್ಲೆಕ್ಸ್ ಗಳ ಆರ್ಭಟ ಜೋರಾಗಿತ್ತು. ಪಥ ಸಂಚಲನದ ಮಾರ್ಗದ ಉದ್ದಕ್ಕೂ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದವು.‌ ಇಡೀ ನಗರ ಕೇಸರಿಮಯವಾಗಿತ್ತು.

ರೋಮಾಂಚನಕಾರಿ ದೃಶ್ಯ:

ಇಲ್ಲಿನ ಬಸವೇಶ್ವರ ಮೈದಾನದಿಂದ ಎರಡು ತಂಡಗಳಲ್ಲಿ ಹೊರಟ ಗಣವೇಷಧಾರಿಗಳ ಪಥಸಂಚಲನ ಪ್ರತ್ಯೇಕವಾಗಿ ನಗರಾದ್ಯಂತ ಸಂಚರಿಸಿ, ಬಸವೇಶ್ವರ ವೃತ್ತದಲ್ಲಿ ಎರಡೂ ತಂಡಗಳು ಒಟ್ಟಾಗಿ ಸೇರಿ ಮುಂದೆ ಸಾಗುವ ದೃಶ್ಯ ರೋಮಾಂಚನಕಾರಿ ಆಗಿತ್ತು. ಈ ದೃಶ್ಯ ಕಣ್ತುಂಬಿಕೊಳ್ಳಲು ಜಿಲ್ಲೆಯ ನಾನಾ ಕಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಅಭಿಮಾನಿಗಳು ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡಿದ್ದರು.

ರಂಗೋಲಿಗಳ ಸ್ವಾಗತ:

ಪಥ ಸಂಚಲನ ಮಾರ್ಗದುದ್ದಕ್ಕೂ ಪ್ರತಿ‌ಮನೆಗಳ‌ ಮುಂದೆ ಚಿತ್ತ ಚಿತ್ತಾರದ ರಂಗೋಲಿಗಳು ಸ್ವಾಗತ, ಮಕ್ಕಳು ಹಾಗೂ ಯುವಕರು‌ ರಾಷ್ಟ್ರ ಭಕ್ತರ ವೇಷದಲ್ಲಿ ನಿಂತುಕೊಂಡು ಪಥ ಸಂಚಲನ್ನು ಸ್ವಾಗತಿಸುವ ಪರಿ ನೋಡಿಯೇ ಅನುಭವಿಸಬೇಕು. ಹಾಗಿತ್ತು ಅಂದಿನ ಸಂಭ್ರಮ.

ಪಥಸಂಚಲನ ಮಹಾ ಸಂಗಮ‌ ಸ್ಥಳದಲ್ಲಿ ಸಂಸದ ಪಿ.ಸಿ.‌ಗದ್ದಿಗೌಡರ, ಮೇಲ್ಮನೆ ಸದಸ್ಯರಾದ ಪಿ.ಎಚ್. ಪೂಜಾರ, ಎಚ್.‌ಅರ್.ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ರಾಜು ರೇವಣಕರ, ಹೂವಪ್ಪ ರಾಠೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Scroll to Top